ಹಳ್ಳಿ

ಬೆಂಗಳೂರಿನಲ್ಲಿ ಬುದ್ಧಿಯ ಬಿಸಿಬೇಳೆ
ಬಾತು ತಿನ್ನುತ್ತ ಸಂಕೀರ್ಣ ಅಸಂಗತ ಹಾಳುಮೂಳು
ಹೂತು ತಲೆತಪ್ಪಲೆಗೆ ಸಟ್ಟುಗ ತಿರುವುತ್ತ
ಹೊಟ್ಟೆಯಲ್ಲಿ ಹೂವರಳಿಸ ಹೊರಟವನು
ಹಳ್ಳಿಗೆ ಹೋದಾಗ ಭ್ರಮೆ ಬಿಳುಚಿಕೊಂಡಿತು.

ಚೌಕಟ್ಟಿಲ್ಲದ ಊರಬಾಗಿಲು ನೆಲಮುಗಿಲು
ಪ್ರೈಮರಿ ಶಾಲೆಯಲ್ಲಿ ಶಾರದೆಗೆ ಸೀರೆ ಉಡಿಸುವ ಸಡಗರ
ಗೋಡೆಗಳ ಕಟ್ಟು ಕಳಚಿ ಗಾಳಿ ಬೆಳಕು ಅಗಾಧ
ಮೇಲು ಕೀಳು ತಲೆಕೆಳಗು ಮಾಡಿದ ಏಕೈಕ ವೇದಿಕೆ ಎಲ್ಲ ತರ-
ಗತಿಗಲ್ಲೆ ಸ್ಥಾನಮಾನ.
ಒಂದೊಂದ್ಲ ಒಂದು ವಂದಾಕೆ ಸಾ, ಬಸವ ಕಮಲ ಜಿಗುಟ್ದಾ ಸಾ
ಇತ್ಯಾದಿ ಹ್ರಸ್ವ ದೀರ್ಘ ವೈವಿಧ್ಯ ಸ್ವರಮೇಳ
ಸರಸ್ವತಿ ಸೌಧಕ್ಕೆ ಗುದ್ದಲಿಪೂಜೆಯ ಗದ್ದಲ.

ಊರ ಹೊಕ್ಕರೆ ಸಂದಿಗೊಂದಿಗಳಲ್ಲಿ ನೆಲಕ್ಕೆ ಕಾಲರ
ಕಕ್ಕಿತ್ತು; ಗಾರೆನೆಲ ಉಪ್ಪು ಉಕ್ಕಿತ್ತು
ಬೀದಿಯಲ್ಲೆಲ್ಲ ಭಾರತ ದರ್ಶನ;
ಹಿಟ್ಟಿನ ಸೀಕು ತಿನ್ನುತ್ತ ನಿಂತ ಸಿಂಬಳಬುರುಕ ತಲೆಕೆರುಕ
ಮೂಳೆಚಕ್ಕಳ ತಂಡತಂಡದ ಭವಿಷ್ಯ ಇಕ್ಕಳದಲ್ಲಿ ಬತ್ತಲೆ ಗ್ರಾಮಗಿರಣಿಯಲ್ಲಿ ಮೈತಳೆದ ಬೆರಣಿ
ಬಾಳು ಬಿಡಿಸುತ್ತ ಬಂದ ಸೊನ್ನೆ ಸರಣಿ
ನೊಗ ಹೊತ್ತು ಹೊರಟ ಬಡ ಎತ್ತಿನ ಕತ್ತು ಹುಣ್ಣು
ಗೋಣಿತಾಟಿನಲ್ಲಿ ಗೋವಿನ ಮೈ ನೀಟು ಮಾಡುವ ಹೆಣ್ಣು
ಇಲ್ಲದ ಹಾಲಿಗೆ ಕೆಚ್ಚಲು ಕಚ್ಚಿ ಚಪ್ಪರಿಸುವ ಕರು-
ವಿನ ಹಿಂದೆ ನಿಂತು ಮೂಸಿ ನೋಡುವ ನಾಯಿ
ಕಂಡು ಕಲ್ಲು ಎಸೆಯಲೆ ಎಂದುಕೊಂಡಾಗ
ಹಳ್ಳಿಗೇ ಹೆರಿಗೆ ಮಾಡಿಸಲು ಪ್ರಮಾಣವಚನ ಸ್ವೀಕರಿಸಿದ
ಪುಢಾರಿ ಹಲ್ಲು ಕಿಸಿದ

ಮೈ ತುಂಬ ಯೋಜನೆಯ ಮ್ಯಾಪು ಮುದ್ರಿಸಿಕೊಂಡು
ಮಾರುದ್ದ ಮಾತು ಹೊಸೆದ
ಬಚ್ಚಲಿನ ನೀರು ನಿಂತ ಕೊಚ್ಚೆ ಕಾಲುವೆಗೆ ಯಾರೋ ಒಬ್ಬ
ಸತ್ತ ಇಲಿ ಹೆಗ್ಗಣ ಎಸೆದ.

ಚಾವಡಿಯ ಚಂದ್ರಯಾನದ ಚರ್ಚೆಯಲ್ಲಿ
ಪೂಜಾರಿ ಪಾತ್ರ ಎಷ್ಟು ಗಾತ್ರ!
ಬೀಡಿಯ ಒಂದೊಂದು ದಮ್ಮಿಗೂ ತರಾವರಿ ಶೈಲಿ ಚಿಮ್ಮಿ
ಚಂದ್ರಯಾನ ಸುಳ್ಳು ಚಿಲ್ಲರೆ- ಎಂದು ಸಾರಿದ
ತನ್ನ ಮಂತ್ರಯಂತ್ರ ಎಷ್ಟು ಘನ ಬಲ್ಲಿರೆ- ಎಂದು ಭುಜ ಕುಣಿಸಿದ.
ಎಲ್ಲಿ ಸಲ್ಲದಿದ್ದರೂ ನನ್ನಲ್ಲಿ ಸಲ್ಲಿರೆ- ಎಂದು ಕರೆ ನೀಡಿದ
ಮಾತಿನಿಂದ ಮಾತಿಗೆ ಸರ್ಕಸ್ಸು ನೆಗೆತ ಮಗ್ನ ಮಹಾಜನರ
ಅನುಭವ ಮಂಟಪದಲ್ಲಿ ಗಾಂಧಿ ಇಂದಿರಾಗಾಂಧಿ ಸೇಂದಿ
ಎಲ್ಲ ಹುಟ್ಟಿಸತ್ತು ಸತ್ತುಹುಟ್ಟಿ ಪಾಪ!
ಸಂಸ್ಕಾರ ಮಾಡದೆ ಬರಿ ಸಂತಾಪ!

ತೆನೆ ತೆಕ್ಕೆಗೆ ತುಡಿಯುತ್ತ ಆಸ್ತಮ ಹತ್ತಿದ ಫಸಲು ಪಡೆದ ಬೆವರು
ಬರೆದ ಕತೆ ಲೆಕ್ಕಕ್ಕೆ ಸಿಕ್ಕದಷ್ಟು ಪುನರ್‌ಮುದ್ರಣವಾಗುತ್ತಿದೆ
ಅಷ್ಟು ಇಷ್ಟು ಬಂದರೆ ಪ್ರಕಾಶಕನ ಪಾಲಾಗುತ್ತಿದೆ.
ದಡ್ಡ ದೊಡ್ಡ ಕುರುಡು ಹುರುಡು ಬುದ್ಧಿಲದ್ದಿ
ಎಲ್ಲ ತರದ ತವರಾದ ಹಳ್ಳಿ
ಬಳ್ಳಿ ಹಬ್ಬಿದ ಸಾವುಚಪ್ಪರದಲ್ಲಿ ಮಣ್ಣ ಮದುವೆಯಾಗುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”
Next post ಗಿಡಕ್ಕೆ ಟೋಪಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys